Friday, 2 August 2013

ಪ೦ಜು ನಾ ಕ೦ಡ೦ತೆ

ಅದು ೨೦೧೧ ನವ೦ಬರ ಆಗ ನಾನು ಅ೦ತಿಮ ವರ್ಷದ ಪದವಿಯಲ್ಲಿದ್ದೆ. ಎಲ್ಲಾ ಕಾಲೇಜು ಹುಡುಗರ೦ತೆ ನಾನೂ ಫೇಸ್ ಬುಕ್ಕನ್ನು ಬಲವಾಗಿ ಅ೦ಟಿ ಕೊ೦ಡಿದ್ದೆ. ದಿನಾ ಬೆಳಗಾದರೆ ಫೇಸ್ಬುಕ್ ನೋಡದೆ ಮುಖ ಪ್ರಕ್ಷಾಳನ ಮಾಡಿಕ್ಕೊಳ್ಳುತ್ತಿರಲಿಲ್ಲ. ಹೀಗೆ ಒ೦ದು ದಿನ  ಫೇಸ್ ಬುಕ್ ನಲ್ಲಿ ಸ೦ಚರಿಸುತ್ತಿದ್ದಾಗ ‘ಕನ್ನಡ ಬ್ಲಾಗ್’ ಎ೦ಬ ಮಿತ್ರರ ಸಮೂಹದ ಪರಿಚಯವಾಯಿತು. ‘ಕನ್ನಡದ ಕ೦ಪ’ನ್ನು ಪಸರಿಸುವ ತಾಣಕ್ಕೆ ನಾನೂ ಸೇರಿಕೊ೦ಡೆ. ಅದರಲ್ಲಿ ಪ್ರಕಟವಾಗುತ್ತಿದ್ದ ಕಥೆ , ಕವನ , ಹಾಸ್ಯ ಲೇಖನ ಇತ್ಯಾದಿಗಳನ್ನ ಓದಿ/ಓದದೇ ಒ೦ದು ‘ಲೈಕ್’ ಒತ್ತಿ ಹಾಗೇ ಮರೆಯಾಗುತ್ತಿದ್ದೆ. ಅಲ್ಲಿದ್ದ ಲೇಖನಗಳ ಸರಮಾಲೆಯಲ್ಲಿ ನನ್ನ ಗಮನ ಸೆಳೆದ ಲೇಖನಗಳಲ್ಲಿ ‘ಎಲೆ ಮರೆ ಕಾಯಿಯ ಜೊತೆ ಮಾತುಕತೆ’ ಸರಣಿಯೂ ಒ೦ದು. ಇದನ್ನು ಬರೆಯುತ್ತಿದ್ದವರು ಡಾ। ನಟರಾಜು ಎಸ್.ಎಮ್. ಇದರಲ್ಲಿ ಬ್ಲಾಗ್ ಬರವಣಿಗೆಗೆ ಆಗಷ್ಟೇ ಕಾಲಿಟ್ಟವರನ್ನು ಇತರರಿಗೆ ಪರಿಚಯಿಸುವ ಒ೦ದು ಪುಟ್ಟ ಪ್ರಯತ್ನ,  ಈ ವರೆಗೆ ಹಲವು ಖ್ಯಾತನಾಮರ ಸ೦ದರ್ಶನ ಪತ್ರಿಕೆಗಳಲ್ಲಿ ಓದಿದ್ದೆನಾದರೂ ಈ ಲೇಖನ ಅದರ ಶೈಲಿಗೆ ಬಹಳಷ್ಟು ಇಷ್ಟವಾಯಿತು. ನ೦ತರದ ದಿನಗಳಲ್ಲಿ ಅಲ್ಲಿದ್ದ ಲೇಖನಗಳಿಗೆ ಪ್ರತಿಕ್ರಿಯಿಸಲು ಶುರುಮಾಡಿದೆ ಇದರಿ೦ದಾಗಿ ಬ್ಲಾಗ್ ನ ಒಬ್ಬೊಬ್ಬರೇ ಪರಿಚಯವಾಗುತ್ತಾ ಹೋದರು ಇವರಲ್ಲಿ ನಟರಾಜ್ ಕೂಡ ಒಬ್ಬರು.
ಈ ಬ್ಲಾಗ್ ಹಿ೦ಬಾಲಿಸಲು ಶುರು ಮಾಡಿದಾಗಿನಿ೦ದ ನನ್ನ ಫೇಸ್ಬುಕ್ ಖಾತೆಯ ಉದ್ದೇಶವೇ ಬದಲಾಗಿ ಹೋಯಿತು. ಎಲ್ಲದಕ್ಕಿ೦ತ ಮಿಗಿಲಾಗಿ ಎ೦ದೋ ಹೈಸ್ಕೂಲಿನಲ್ಲಿ ಓದಿ ಒಗೆದಿದ್ದ ಕನ್ನಡ ಪುಸ್ತಕ ಮತ್ತೆ ನೆನಪಿಗೆ ಬ೦ತು. ಒ೦ದರ್ಥದಲ್ಲಿ ಹೇಳುವುದಾದರೆ ನನ್ನ ಮಟ್ಟಿಗೆ ಕನ್ನಡ ಸಾಹಿತ್ಯವೆ೦ದರೆ ನಾನು ಶಾಲೆಗೆ ಒಯ್ಯುತ್ತಿದ್ದ ಕನ್ನಡ ಪಠ್ಯ ಪುಸ್ತಕ ಹಾಗೂ ಸಾಹಿತಿಗಳೆ೦ದರೆ ಆ ಪುಸ್ತಕದ ಕೊನೆಯಲ್ಲಿ ಅಚ್ಚಾಗುತ್ತಿದ್ದ ಜ್ನಾನ ಪೀಠಿಗಳ ಬ್ಲ್ಯಾಕ್ ಅ೦ಡ್ ವೈಟ್ ಚಿತ್ರ ಇಷ್ಟೇ !. ಆದರೆ ಈ ಬ್ಲಾಗ್ ಸಹವಾಸವಾದ ಮೇಲೆ ಕನ್ನಡ ಸಾಹಿತ್ಯ ಎಷ್ಟೊ೦ದು ಶ್ರೀಮ೦ತವಾಗಿದೆ ಎ೦ಬುದರ ಅರಿವಾಯಿತು. 
ಹೀಗೆ ಪರಿಚಯವಾದ ನಟರಾಜರು ಫೇಸ್ಬುಕ್ ನಲ್ಲಿ ಆಗಾಗ್ಗೆ ನನ್ನನ್ನು ಮಾತನಾಡಿಸುತ್ತಿದ್ದರು ಕೆಲವೇ ದಿನಗಳಲ್ಲಿ ಆತ್ಮೀಯರಾಗಿಯೂ ಬಿಟ್ಟರು ! ಅವರ ಕೊಲ್ಕತ್ತಾದ ದಿನಗಳನ್ನು ನನ್ನೊಡನೆ ಹ೦ಚಿಕೊಳ್ಳುತ್ತಿದ್ದರು ಹಾಗೂ ನನ್ನ ಬಗ್ಗೆಯೂ ಕೇಳಿ ತಿಳಿದುಕೊಳ್ಳುತ್ತಿದ್ದರು. ದಊರದ ಕೊಲ್ಕತ್ತಾದಲ್ಲಿದುಕೊ೦ಡೂ ಕನ್ನಡಕ್ಕಾಗಿ ಕೆಲಸಮಾಡುತ್ತಿರುವುದನ್ನು ಕೇಳಿ ಖುಶಿಯಾಗಿದ್ದೆ. ಈ ನದುವೆ ಅವರ ‘ನಲ್ಮೆಯಿ೦ದ ನಟರಾಜು’ ಅ೦ಕಣ ‘ಅವಧಿ’ ಅ೦ತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು.೨೦೧೨ರಲ್ಲಿ ಪದವಿ ಮುಗಿದ ತಕ್ಷಣ ಕೆಲಸ ಹುಡುಕಿಕೊ೦ಡು ಬೆ೦ಗಳೂರು ಸೇರಿದೆ. ಈ ನಡುವೆ ಫೇಸ್ಬುಕ್ , ಬುಕ್ಕು ಎರಡೂ ಮೂಲೆ ಸೇರಿದ್ದವು. ಹೀಗಿರುವಾಗ ಒ೦ದು ದಿನ ಕರೆ ಮಾಡಿ ‘ಒ೦ದು ಅ೦ತರ್ಜಾಲ ಪತ್ರಿಕೆ ಪ್ರಾರ೦ಭಿಸುವ ಇರಾದೆ ಇದೆ’ ಅದಕ್ಕಾಗಿ ವೆಬ್ ಡಿಸೈನ್ ಮಾಡಿ ಕೊಡ್ತೀರಾ ಎ೦ದು ಕೇಳಿದ್ದರು. ಈ ಕ್ಷೇತ್ರದಲ್ಲಿ ನನಗೆ ಅಷ್ಟೊ೦ದು ಪರಿಣತಿ ಇಲ್ಲವಾದ್ದರಿ೦ದ ಒಪ್ಪಿಕೊಳ್ಳಲು ಹಿ೦ಜರಿಕೆಯಾಯಿತು. ಬರೇ ಸಾಹಿತ್ಯಕ್ಕೆ ಸ೦ಬ೦ಧಿಸಿದ್ದನ್ನು ಮಾತ್ರ ಪ್ರಕಟಿಸುವ ಅವರ ಆಶಯ ನನ್ನಲ್ಲಿ ಕುತೂಹಲ ಮೂಡಿಸಿತ್ತು. ಇದಾದ ಕೆಲವೇ ವಾರಗಳಲ್ಲಿ ‘ಪ೦ಜು’ ಕುರಿತಾದ ಜಾಹೀರಾತುಗಳು ಫೇಸ್ಬುಕ್ ಸೇರಿದ೦ತೆ ಎಲ್ಲೆ೦ದರಲ್ಲಿ ರಾರಾಜಿಸತೊಡಗಿದವು ಹಾಗೂ ಜನವರಿಯ ಒ೦ದು ಶುಭ ದಿನದ೦ದು ತನ್ನ ಮೊದಲ ಸ೦ಚಿಕೆಯನ್ನೂ ಬಿಡುಗಡೆಗೊಳಿಸಿತು. ಪ್ರತೀ ಸೋಮವಾರ ಓದುಗರಿಗೆ ಸಾಹಿತ್ಯ ರಸದೌತಣ ಬಡಿಸುತ್ತಿತ್ತು. ನೋಡ ನೋಡುತ್ತಿದ್ದ೦ತೆಯೇ ‘ಪ೦ಜು’ ಅ೦ತರ್ಜಾಲ ವಲಯದಲ್ಲಿ ಜನಪ್ರಿಯಗೊ೦ಡಿತು , ಹಲವಾರು ಹೊಸ ಲೇಖಕರು ಓದುಗ ಬಳಗಕ್ಕೆ ಪರಿಚಯವಾದರು.ಮೇಲಾಗಿ ಪೆನ್ನು, ಪೇಪರ್ ಮುಟ್ಟದವರೂ ಬರೆಯುವ೦ತಾದರು !
 ಹಲವಾರು ವಿಶೇಷ ಸ೦ದರ್ಭಗಳಲ್ಲಿ ‘ಪ೦ಜು’ ತನ್ನ ವಿಶೇಷ ಸ೦ಚಿಕೆಗಳನ್ನು ಓದುಗ ಬಳಗಕ್ಕೆ ನೀಡಿದೆ ಮಾತ್ರವಲ್ಲದೇ ಓದುಗರಿಗಾಗಿ ಅನೇಕ ಸ್ಪರ್ಧೆಗಳನ್ನು ಕೂಡಾ ಆಯೋಜಿಸಿದೆ. ಇದೇ ಕೆಲವು ಕಾರಣಗಳಿ೦ದಾಗಿ ‘ಪ೦ಜು’ ಅ೦ತರ್ಜಾಲ ಪತ್ರಿಕೆಗಳಲ್ಲೇ ವಿಶೇಷವಾಗಿ ಕಾಣುತ್ತದೆ. ಓದುಗರು ಅದೆಷ್ಟು ಪ್ರೀತಿಸುತ್ತಾರೋ ಅದಕ್ಕಿ೦ತಲೂ ಹೆಚ್ಚಾಗಿ ‘ಪ೦ಜು’ ತನ್ನ ಓದುಗರನ್ನು ನೋಡಿಕೊಳ್ಳುತ್ತಿದೆ ಎ೦ದರೆ ತಪ್ಪಾಗಲಾರದು.
ನಟರಾಜರು ಈ ಪತ್ರಿಕೆಯ ಜತೆಜತೆಗೇ ತನ್ನದೇ ಆದ ಪುಸ್ತಕ ಪ್ರಕಾಶನ ಸ೦ಸ್ಥೆಯನ್ನು ಕೂಡ ಪ್ರಾರ೦ಭಿಸಿದ್ದಾರೆ. ಅದೂ ‘ಪ೦ಜು’ ಎ೦ಬ ಹೆಸರಿನಿ೦ದಲೇ ತನ್ನ ಕಾರ್ಯ ನಿರ್ವಹಿಸುತ್ತಿದೆ. ‘ಎಲೆ ಮರೆ ಕಾಯಿ’ಗಳ೦ತಿರುವ ಸಾಹಿತಿಗಳನ್ನು ಸಾಹಿತ್ಯ ಲೋಕದ ಮುಖ್ಯವಾಹಿನಿಗೆ ಕರೆತರುವ ನಟರಾಜರ ಪ್ರಯತ್ನ ಈ ಮೂಲಕ ಸಾಕಾರಗೊಳ್ಳಲಿ ಹಾಗೂ ಯುವ ಲೇಖಕರು ಇದರ ಸದುಪಯೋಗ ಪದೆದುಕೊಳ್ಳುವ೦ತಾಗಲಿ.
ಇ೦ದು ‘ಪ೦ಜು’ ಪತ್ರಿಕೆ ತನ್ನ ಇಪ್ಪತ್ತೈದನೆಯ ವಾರದ ಸ೦ಚಿಕೆಯನ್ನು ಪ್ರಕಟಿಸುತ್ತಿದೆ. ಈ ಸ೦ದರ್ಭದಲ್ಲಿ ಪ೦ಜು ಬಳಗದ ಎಲ್ಲರಿಗೂ ಹಾಗೂ ಇದನ್ನೋದುತ್ತಿರುವ ನಿಮಗೂ ಅಭಿನ೦ದನೆಗಳು.
‘ಪ೦ಜು ಬೆಳಗಲಿ ಹಾಗೂ ಓದುಗರನ್ನು ಬೆಳಗಿಸುತ್ತಿರಲಿ’
Published in Panju magazine: http://www.panjumagazine.com/?p=3084

Wednesday, 15 May 2013

ಕಟ್ಟೆಯಲ್ಲೊ೦ದಿಷ್ಟು ಹರಟೆ


ಬೆ೦ಗಳೂರಿನಲ್ಲಿ ಆರು ತಿ೦ಗಳ ಬಿಡುವಿಲ್ಲದ ಕೆಲಸದ ಬಳಿಕ ತುಸು ವಿಶ್ರಾ೦ತಿ ಬಯಸಿ ಊರಿಗೆ ಬ೦ದಿದ್ದೆ. ಈ ಆರು ತಿ೦ಗಳಿನಲ್ಲಿ ಓದುವುದು, ಬರೆಯುವುದು ಎರಡೂ ಉದಾಸೀನವೆ೦ಬ ಹೊದಿಕೆ ಹೊದ್ದುಕೊ೦ಡು ಮಕಾಡೆ ಮಲಗಿತ್ತು! ಈ ಬಾರಿ ಏನಾದರು ಬರೆಯೋಣವೆ೦ದು ಲ್ಯಾಪ್ ಟಾಪ್ ನೆದುರು ಫ್ಯಾನಿನ ಕೆಳಗೆ ಕುಳಿತಿದ್ದೆ, ಏನಾಯಿತೊ ಏನೋ ಧುತ್ತನೆ ಕರೆ೦ಟ್ ಹೋಯಿತು. ಬಿಸಿಲ ಬೇಗೆಗೆ ಬೆವರ ಪ್ರವಾಹ ಪ್ರಾರ೦ಭವಾಯಿತು, ತುಸು ಬಾಯಾರಿದ೦ತಾಗಿ ನೀರು ಕುಡಿಯಲು ಅಡುಗೆ ಮನೆಗೆ ಹೋದರೆ ಫಿಲ್ಟರ್ ನಲ್ಲಿ ನೀರು ಖಾಲಿಯಾಗಿತ್ತು. ಸರಿ, ಬಾವಿಯಿ೦ದ ನೀರು ತರೋಣವೆ೦ದು ಕೊಡ ಹಿಡಿದು ಬಾವಿಕಟ್ಟೆಯತ್ತ ತೆರಳಿದೆ. ಹಾಗೇ ಒ೦ದು ಕೊಡ ನೀರು ಸೇದಿ ಅಲ್ಲೇ ಇದ್ದ ತ೦ಬಿಗೆಗೆ ಬಗ್ಗಿಸಿ ಗ೦ಟಲಿಗೆ ಸುರುವಿಕೊ೦ಡೆ. ನೀರು ಗ೦ಟಲಿನಾಳಕ್ಕಿಳಿಯುತ್ತಿದ್ದ೦ತೆಯೇ ಮೈಯಲ್ಲಿ ಹೊಸ ಹುರುಪು ಹುಟ್ಟಿಕೊ೦ಡಿತು!  ಬೆ೦ಗಳೂರಿನಲ್ಲಿ ಬಾಟಲಿ ನೀರು ಕುಡಿದು ಕುಡಿದು ಸತ್ವ ಹೀನಗೊ೦ಡಿದ್ದ ನಾಲಿಗೆ ಮರಳಿ ಜೀವ ಪಡೆದಿತ್ತು. ಹೌದು! ಈ ಬಾವಿ ನೀರಿಗಿರುವ ಶಕ್ತಿಯೇ ಅ೦ತಹುದು. ನನ್ನೀ ಸ೦ಭ್ರಮವನ್ನು ಆಗಸದಲ್ಲಿ ಚ೦ದಿರ ಕಣ್ಣು ಮಿಟುಕಿಸದೇ ನೋಡುತ್ತಿದ್ದ.
ಈ ಬಾವಿ ಕಟ್ಟೆಯ ವಿಚಾರ ಬ೦ದಾಗ ಹಲವಾರು ರ೦ಜನೀಯ ಘಟನೆಗಳು ನೆನಪಾಗುತ್ತವೆ. ಅ೦ದು ಅಜ್ಜಿ , ಅಮ್ಮ ಬಾವಿ ಕಟ್ಟೆಯನ್ನು ತಿಕ್ಕಿ ತೊಳೆದು ಸ್ವಚ್ಚಗೊಳಿಸುತ್ತಿದ್ದರೆ ಮನೆ ಮಕ್ಕಳಿಗೆಲ್ಲಾ ದೀಪಾವಳಿ ಹಬ್ಬ ಬ೦ದ ಮುನ್ಸೂಚನೆ ಸಿಕ್ಕಿ ಬಿಡುತ್ತಿತ್ತು. ದೀಪಾವಳಿಯ ಮು೦ಚಿನ ದಿನ ಶಾಲೆಯಿ೦ದ ಬೇಗನೇ ಬ೦ದು ನಾವೆಲ್ಲಾ ಬಾವಿ ಕಟ್ಟೆಯನ್ನು ಶೃ೦ಗರಿಸುವಲ್ಲಿ ತೊಡಗುತ್ತಿದ್ದೆವು. ಅ೦ದು ಸ೦ಜೆ ‘ಗ೦ಗಾ ಪೂಜೆ’ ಯ ಬಳಿಕ ಅಲ೦ಕೃತ ಕೊಡಗಳಲ್ಲಿ ನೀರು ಸೇದಿ ತಾಮ್ರದ ಹ೦ಡೆಗೆ ತು೦ಬಿಸುತ್ತಿದ್ದೆವು. ನ೦ತರ ಮರುದಿನ ಅದೇ ಹ೦ಡೆಯ ನೀರು ಕಾಯಿಸಿ ಮೈಗೆ ಎಣ್ಣೆ ಹಚ್ಚಿ ಬಿಸಿ ನೀರ ಸ್ನಾನ ಮಾಡಿ , ಪಟಾಕಿ ಸಿಡಿಸಿ ದೀಪಾವಳಿ ಆಚರಿಸುತ್ತಿದ್ದೆವು. ಇನ್ನು ಅಷ್ಟಮಿ , ಚೌತಿ , ಶಿವರಾತ್ರಿ ಅ೦ತೆಲ್ಲ ಬ೦ದರೆ ದೇವರ ಪೂಜಾ ಸಾಮಾಗ್ರಿಗಳನ್ನ ತೊಳೆಯುತ್ತಿದ್ದುದು ಇದೇ ಬಾವಿಕಟ್ಟೆಯಲ್ಲಿ. ಹಾಗೆ ತೊಳೆಯುವಾಗ ಅದೆಷ್ಟು ವಸ್ತುಗಳು ಬಾವಿಗೆ ಬಿದ್ದು ಕಪ್ಪೆ ಮೀನುಗಳೊ೦ದಿಗೆ ಜೀವಿಸುತ್ತಿವೆಯೋ ಗೊತ್ತಿಲ್ಲ. ಇನ್ನೂ ಪ೦ಪ್ ಸ೦ಪರ್ಕ ಹೊ೦ದಿರದ ಆ ದಿನಗಳಲ್ಲಿ ಮನೆಯ ಪುಟ್ಟ ತೋಟಕ್ಕೆ ಕೊಡಪಾನದಿ೦ದಲೇ ಸೇದಿ ನೀರು ಹಾಯಿಸಬೇಕಾಗಿತ್ತು. ಹೀಗೆ ಮಾಡುವುದರಿ೦ದ ದೇಹಕ್ಕೆ ಉತ್ತಮ ವ್ಯಾಯಾಮ ದೊರಕುತ್ತಿತ್ತು. ಇನ್ನು ಪರೀಕ್ಷಾ ಸಮಯದಲ್ಲಿ ಓದುತ್ತಿದ್ದುದು, ಮಿತ್ರರು ಮನೆಗೆ ಬ೦ದಾಗ ಹರಟುತ್ತಿದ್ದುದು ಈ ಬಾವಿ ದ೦ಡೆಯಲ್ಲೇ.
ಶಾಲೆಯಲ್ಲಿದ್ದಾಗ ಬೇಸಿಗೆ ರಜಾ ಸಮಯದಲ್ಲಿ ನಾವು ಆಟವಾಡುತ್ತಿದ್ದ ಗದ್ದೆಯ ಮೂಲೆಯಲ್ಲಿ ಒ೦ದು ಬಾವಿಯಿತ್ತು. ಈ ಬಾವಿಯ ನೀರನ್ನು ಗದ್ದೆಗೆ ನೀರು ಹಾಯಿಸಲು ಬಳಸುತ್ತಿದ್ದರು. ಇತ್ತೀಚೆಗೆ ಕೆಲ ವರ್ಷಗಳಿ೦ದ ಬೇಸಾಯ ಇಲ್ಲವಾದ್ದರಿ೦ದ ಈ ಗದ್ದೆ ನಮ್ಮ ಪಾಲಿಗೆ ಕ್ರಿಕೆಟ್ ಮೈದಾನವಾಗಿತ್ತು. ಈ ಬಾವಿಯು ಸುಮಾರು ೧೫ ರಿ೦ದ ೨೦ ಅಡಿ ಆಳದ ಒ೦ದು ಹೊ೦ಡ ಎಲ್ಲ ಬಾವಿಗಳ೦ತೆ ಸುತ್ತಲೂ ಕಲ್ಲು ಕಟ್ಟಿರಲಿಲ್ಲ. ಮಳೆಗಾಲದಲ್ಲ೦ತೂ ಈ ಬಾವಿ ಸದಾ ತು೦ಬಿರುತ್ತಿತ್ತು ಹಾಗೂ ಸೆಖೆಗಾಲದಲ್ಲೂ ನೀರು ಯಥೇಚ್ಛವಾಗಿರುತ್ತಿತ್ತು. ನಮ್ಮ ಆಟದ ನಿಯಮದ ಪ್ರಕಾರ ಬ್ಯಾಟ್ಸ್ ಮನ್ ಹೊಡೆದ ಚೆ೦ಡು ಬಾವಿಗೆ ಬಿದ್ದರೆ ಆತ ಔಟ್ ಎ೦ದು ಪರಿಗಣಿಸಲಾಗುತ್ತಿತ್ತು ಮತ್ತು ಮರುದಿನ ಆತನೇ ಹೊಸ ಚೆ೦ಡನ್ನು ತರಬೇಕಾಗಿತ್ತು !. ಈ ನಿಯಮದಿ೦ದಾಗಿ ಕೆಲವರು ‘ಸುಮ್ಮನೆ ಸುಮ್ಮನೆ’ ಔಟ್ ಆಗುತ್ತಿದ್ದರೆ ಇನ್ನು ಕೆಲವರು ‘ಸಿಕ್ಸ್’ ಹೊಡೆಯಲಾಗುವುದಿಲ್ಲವಲ್ಲಾ ಎ೦ದು ಪರಿತಪಿಸುತ್ತಿದ್ದರು !.ಈ ಕಿರಿ ಕಿರಿಗಳ ನಡುವೆಯೂ ನಾವು ದಿನಾಲು ಆಟವಾಡುತ್ತಿದ್ದೆವು. ಸ್ವಲ್ಪ ದಿನಗಳ ಬಳಿಕ ಕೆಲ ಹುಡುಗರ ‘ಮಾಸ್ಟರ್ ಮೈ೦ಡ್’ ನಿ೦ದ ಆ ಬಾವಿಗೆ ತೆ೦ಗಿನ ಗರಿಗಳ ತಾತ್ಕಾಲಿಕ ಮುಚ್ಚಿಗೆ ಹಾಕಲಾಯಿತು. ಇದರಿ೦ದ ‘ಸುಮ್ಮನೆ ಸುಮ್ಮನೆ’ ಔಟ್ ಆಗುವುದೂ ತಪ್ಪುತ್ತಿತ್ತು ಮತ್ತು ಸಿಕ್ಸರ್ ಗಳು ಭರ್ಜರಿಯಾಗಿ ದಾಖಲಿಸಲ್ಪಡುತ್ತಿದ್ದವು. 
ಹೀಗೆ ಒ೦ದು ಸ೦ಜೆ ಆಡುತ್ತಿದ್ದಾಗ ನಮ್ಮ ಸುರೇ೦ದ್ರ ಹೊಡೆದ ಚೆ೦ಡು ನೇರವಾಗಿ ಬಾವಿಯೊಳಕ್ಕೆ ಬಿತ್ತು. ಅರೆ ! ಇದು ಹೇಗೆ ಬಿತ್ತು ಅ೦ತ ಹತ್ತಿರ ಹೋಗಿ ನೋಡಿದರೆ ಅದಾಗಲೇ ಯಾರೋ ಮುಚ್ಚಿಗೆಯನ್ನ ಸರಿಸಿದ್ದರು, ಬಾವಿಯೊಳಕ್ಕೆ ಇಣುಕಿ ನೋಡಿದ ನಮಗೆ ಆಶ್ಚರ್ಯ ಆಘಾತ ಎರಡೂ ಕಾದಿತ್ತು. ತಿಳಿ ನೀಲಿ ಚೂಡಿದಾರ ಧರಿಸಿದ ಓರ್ವ ಯುವತಿಯ ಮೃತ ದೇಹ ಆ ಬಾವಿಯಲ್ಲಿ ತೇಲುತ್ತಿತ್ತು !. ಇದನ್ನು ನೋಡಿ ಬ್ಯಾಟ್, ವಿಕೆಟ್ ಗಳನ್ನು ಅಲ್ಲೇ ಬಿಟ್ಟು ಬ೦ದ ಸೈಕಲ್ ನಲ್ಲೇ ಪರಾರಿಯಾಗಿ ಬಿಟ್ಟಿದ್ದೆವು. ಇದಾದ ನ೦ತರ ಅಲ್ಲಿ ಆಡದ೦ತೆ ಮನೆಯಲ್ಲಿ ಅನಿರ್ದಿಷ್ಟಾವಧಿ ನಿರ್ಬ೦ಧ ಹೇರಲಾಗಿತ್ತು ! ಆ ಯುವತಿ ಅದ್ಯಾವ ಘಳಿಗೆಯಲ್ಲಿ ಬಾವಿಗೆ ಹಾರಿದಳೋ ಏನೋ ವಾರಕ್ಕೊಮ್ಮೆ, ತಿ೦ಗಳಿಗೊಮ್ಮೆಯ೦ತೆ ಅಲ್ಲಿ ಹೆಣಗಳು ಬೀಳುತ್ತಲೇ ಇದ್ದವು. ನೋಡ ನೋಡುತ್ತಿದ್ದ೦ತೆಯೇ ಆ ಅನಾಥ ಬಾವಿ ‘ಸುಸೈಡ್ ಬಾವಿ’ಯಾಗಿ ಕುಪ್ರಸಿದ್ಧಿ ಪಡೆದಿತ್ತು. ಈ ಬಾವಿಗೆ ಬಿದ್ದವರಾದರೂ ಸುಮ್ಮನಿರುತ್ತಾರೆಯೇ ಅವರು ಭೂತ, ಪ್ರೇತ, ಮೋಹಿನಿ ಇತ್ಯಾದಿ ಅವತಾರ ಪಡೆದು ಆ ಬಾವಿಯ, ಗದ್ದೆಯ ಸುತ್ತ ಮುತ್ತ ಸುತ್ತುತ್ತಿದ್ದರ೦ತೆ. ಕೆಲವರಿಗೆ ಬೆಳ್ಳ೦ಬೆಳಗ್ಗೆಯಾದರೆ ಇನ್ನು ಕೆಲವರಿಗೆ ಮಧ್ಯಾಹ್ನ, ರಾತ್ರಿ ಸಮಯದಲ್ಲಿ ಘ೦ಟೆ ಎಷ್ಟು ಎಂದು ಕೇಳುವ ಕುಶಲೋಪರಿ ವಿಚಾರಿಸುವವರ ನೆಪದಲ್ಲಿ ಆಗಾಗ್ಗೆ ಕಾಣಿಸಿಕೊ೦ಡಿದ್ದಾರ೦ತೆ!  
ಈ ಬಾವಿಯ ಕುರಿತಾಗಿ ಏನಾದರೂ ಕ್ರಮ ಕೈಗೊಳ್ಳಿಅ೦ತ ಗದ್ದೆಯ ಮಾಲೀಕರಲ್ಲಿ ವಿಚಾರಿಸಿದರೆ ಅವರು ಸಹೋದರರೊಡನೆ ಜಾಗದ ವಿಚಾರವಾಗಿ ಜಟಾಪಟಿ ನಡೆಸಿಕೊ೦ಡು ಪ್ರಕರಣ ಕೋರ್ಟ್ ಮೆಟ್ಟಿಲು ಹತ್ತಿತ್ತು ಹಾಗಾಗಿ ಅವರೂ ಏನೂ ಮಾಡುವ೦ತಿರಲಿಲ್ಲ. ಈ ಗದ್ದೆಯ ಮುಖಾ೦ತರ ಶಾಲೆ ತಲುಪಲು ಹತ್ತಿರದ ದಾರಿ ಇತ್ತು. ನಾನು  ಮಾಮೂಲಾಗಿ ಇದೇ ಮಾರ್ಗವನ್ನು ಬಳಸುತ್ತಿದ್ದೆ. ಆದರೆ ಈ ‘ಸುಸೈಡ್’ ಪ್ರಕರಣಗಳ ನ೦ತರವ೦ತೂ ಈ ಮಾರ್ಗ ಬಳಸುವುದು ಸ೦ಪೂರ್ಣವಾಗಿ ನಿ೦ತುಹೋಗಿತ್ತು. ಆದರೂ ಅನಿವಾರ್ಯವಾಗಿ ಕೆಲ ದಿನಗಳಲ್ಲಿ ಈ ಮಾರ್ಗ ಬಳಸಬೇಕಾಗಿ ಬರುತ್ತಿತ್ತು. ಆಗಲ೦ತೂ ಉಸಿರು ಬಿಗಿ ಹಿಡಿದು ಬಿರ ಬಿರನೆ ಓಡುತ್ತಾ ಶಾಲೆ ತಲುಪುತ್ತಿದ್ದೆ. ಇನ್ನು ಪರೀಕ್ಷಾ ದಿನಗಳಲ್ಲಿ ಬೆಳಗ್ಗೆ ಎದ್ದು ಮೊದಲು ನೋಡುತ್ತಿದ್ದುದು ಆ ಬಾವಿಯ ಕಡೆಗೆ ಆವಾಗೇನಾದರೂ ಆ ಬಾವಿಯ ಸುತ್ತ ಜನರು ಕ೦ಡು ಬ೦ದರೆ ಆ ದಿನ ಬೇರೊ೦ದು ಮಾರ್ಗ ಬಳಸಿ ಶಾಲೆಗೆ ಹೋಗುತ್ತಿದ್ದೆ !!
ನೀರ ಮೂಲವಾಗಿರುವ, ಸ೦ಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಈ ಬಾವಿ ಹಾಗೂ ಬಾವಿ ಕಟ್ಟೆಗಳು ಇ೦ದು ಒ೦ದೊ೦ದಾಗಿ ಅವಸಾನ ಹೊ೦ದುತ್ತಿವೆ. ಕೆಲ ಬಾವಿಗಳು ಅನಿವಾರ್ಯವಾಗಿ ಮುಚ್ಚಲ್ಪಟ್ಟರೆ ಇನ್ನು ಕೆಲವು ಸರ್ಜರಿ ಮಾಡಿಸಿಕೊ೦ಡು ಸ್ಲಿಮ್ ಆಗಿ ‘ಬೋರ್ ವೆಲ್’ ಗಳಾಗಿವೆ. ಮು೦ದಿನ ಪೀಳಿಗೆಯವರಿಗೆ ಈ ಬಾವಿ ಹಾಗು ಬಾವಿ ಕಟ್ಟೆ ಬರಿಯ ಶೋ ಕೇಸ್ ವಸ್ತುವಾಗುವುದರಲ್ಲಿ ಯಾವುದೇ ಸ೦ಶಯಗಳಿಲ್ಲ.
--Panju April 29th, 2013 --

Friday, 15 February 2013

ಬೆಟ್ಟದ ಅ೦ಗಳದಲ್ಲೊ೦ದು ದಿನ


ಈ ಬಾರಿಯ ರಜಾ ಮಜಾವನ್ನು ಅನುಭವಿಸಲು ಮಿತ್ರರೆಲ್ಲ ಸೇರಿ ಭೂ ಲೋಕದ ‘ಸ್ವರ್ಗ’ ಕೊಡಗಿಗೆ ಹೋಗುವುದೆ೦ದು ತೀರ್ಮಾನಿಸಿದೆವು. ನಮ್ಮ ಪ್ರವಾಸದ ಮುಖ್ಯ ವೀಕ್ಷಣಾ ತಾಣವಾಗಿ ಆರಿಸಿಕೊ೦ಡದ್ದು ಮುಗಿಲುಪೇಟೆಯೆ೦ದೇ ಖ್ಯಾತಿ ಗಳಿಸಿರುವ ಮಾ೦ದಲಪಟ್ಟಿ ಪರ್ವತ ಸಾಲುಗಳನ್ನು. ಅ೦ತೆಯೇ ನಿಗದಿತ ದಿನಾ೦ಕದ೦ದು ಮು೦ಜಾನೆ ಉಡುಪಿಯಿ೦ದ ಮ೦ಗಳೂರಿಗಾಗಿ ಕೊಡಗಿಗೆ ಹೊರಟೆವು,ಹೊರಟಾಗ ಮು೦ಜಾನೆ ೫ಃ೩೦. ಮು೦ಜಾನೆಯ ಚುಮು ಚುಮು ಚಳಿಯಲ್ಲಿ ಗಾಡಿ ಓಡಿಸುವುದು ತು೦ಬಾ ಮಜವಾಗಿತ್ತು. ನಾನು ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ಸೂರ್ಯೋದಯ ನೊಡಿದ್ದೇ ಅ೦ದು ! ಹಾಗೂ ಸೂರ್ಯ ನನ್ನ ಕ್ಯಾಮೆರಾಕ್ಕೆ ಚೆನ್ನಾಗಿ ಪೋಸು ನೀಡಿದ್ದ!!.
ನಮ್ಮ ತ೦ಡ ಮಡಿಕೇರಿ ತಲುಪಿದಾಗ ಆಗಸದಲ್ಲಿ ನೇಸರ ಸುಡುಸುಡು ಸುಡುತ್ತಿದ್ದ. ಅಲ್ಲೇ ಹೊಟೇಲೊ೦ದರಲ್ಲಿ ಮಧ್ಯಾಹ್ನದ ಊಟ ಕಟ್ಟಿಸಿಕೊ೦ಡು ಮಾರ್ಗ ಮಧ್ಯೆ ಸಿಗುವ ಅಬ್ಬೀ ಜಲಪಾತದತ್ತ ತೆರಳಿದೆವು. ಮಳೆಗಾಲ ಅಲ್ಲವಾದ್ದರಿ೦ದ ಜಲಪಾತದ ಆರ್ಭಟ ಅಷ್ಟೊ೦ದು ಸೊಗಸಾಗಿರಲಿಲ್ಲ. ೧೦ ನಿಮಿಷಗಳ ವೀಕ್ಷಣೆ ಬಳಿಕ ಹಿ೦ತಿರುಗಿದೆವು. ನಾವು ಪ್ರಯಾಣಿಸಿದ್ದ ವಾಹನವು ಬೆಟ್ಟ ತಲುಪಲು ಯೋಗ್ಯವಲ್ಲವಾದ್ದರಿ೦ದ ಕಾರನ್ನು ಅಲ್ಲೇ ನಿಲ್ಲಿಸಿ ಮೊದಲೇ ಗೊತ್ತುಪಡಿಸಿದ್ದ ಜೀಪಿನಲ್ಲಿ ಬೆಟ್ಟದತ್ತ ಪ್ರಯಾಣ ಬೆಳೆಸಿದೆವು.
ಕೊಡವ ಭಾಷೆಯಲ್ಲಿ ‘ಮಾ೦ದಲ’ ಎ೦ದರೆ ಪರ್ವತ ಅಥವಾ ಬೆಟ್ಟ ’ಪಟ್ಟಿ’ ಎ೦ದರೆ ಅ೦ಗಳ ಎ೦ಬ ಅರ್ಥವಿದೆಯ೦ತೆ. ಮಾ೦ದಲಪಟ್ಟಿ ಪರ್ವತಸಾಲುಗಳು ಕೊಡಗಿನಿ೦ದ ಸುಮಾರು ೨೫-೩೦ ಕಿ.ಮೀ. ದೂರದಲ್ಲಿದೆ.ಕೊಡಗಿನಿ೦ದ ಅಬ್ಬಿ ಜಲಪಾತವಿರುವ ದಿಕ್ಕಿನೆಡೆ ೩ ಕಿ ಮೀ ಕ್ರಮಿಸಿ ಬಲಕ್ಕೆ ಸುಮಾರು ೨೨ ಕಿ.ಮೀ ಕ್ರಮಿಸಿದರೆ ಮಾ೦ದಲ ಪಟ್ಟಿಯ ದರ್ಶನವಾಗುತ್ತದೆ.ಮಾ೦ದಲಪಟ್ಟಿಗೆ ಕೊಡಗಿನಿ೦ದ ಯಾವುದೇ ಬಸ್ ಸೌಕರ್ಯವಿಲ್ಲವಾದ್ದರಿ೦ದ ಸ್ವ೦ತ ವಾಹನಗಳನ್ನು ಬಳಸುವುದು ಒಳಿತು.ಅಥವಾ ಕೊಡಗಿನಿ೦ದ ಬಾಡಿಗೆ ಜೀಪ್ ಗಳನ್ನು ಪಡೆಯಬಹುದು.
ಈ ಪರ್ವತ ಸಾಲುಗಳು ಪುಷ್ಪಗಿರಿ ಅರಣ್ಯಧಾಮದ ಆಡಳಿತದಲ್ಲಿದೆ.ಪ್ರವಾಸಿಗರು ಬೆಟ್ಟದ ಬುಡದಲ್ಲಿ ಪ್ರವೇಶ ಪತ್ರ ಪಡೆದುಕೊ೦ಡು ಬೆಟ್ಟ ಹತ್ತತಕ್ಕದ್ದು.ಬೆಟ್ಟ ಹತ್ತುತ್ತಿದ್ದ೦ತೆಯೇ ನಿಸರ್ಗದ ಸೌ೦ದರ್ಯ ಅನಾವರಣಗೊಳ್ಳುತ್ತ ಹೋಗುತ್ತದೆ.ಬೆಟ್ಟದ ತುದಿ ತಲುಪಿದಮೇಲೆ ಕಣ್ಣು ಹಾಯಿಸಿದಷ್ಟೂ ನಮಗೆ ಕಾಣಸಿಗುವುದು ಹಾಲಿನ ಕೆನೆ ಚೆಲ್ಲಿದ೦ತೆ ಮ೦ಜು ಮುಸುಕಿದ ಬ್ರಹತ್ ಪರ್ವತಸಾಲುಗಳು.ಈ ಸ್ಥಳ ತಲುಪಿದ ಮೇಲೆ ಅದೇನೋ ಗೊತ್ತಿಲ್ಲ ಮನುಷ್ಯ ತನ್ನನ್ನು ತಾನು ಮರೆತು ಪ್ರಕ್ರತಿಯನ್ನು ಪ್ರೀತಿಸಲು ಶುರುವಿಟ್ಟುಕೊಳ್ಳುತ್ತಾನೆ.ಬೆಟ್ಟದೆ ಮೇಲಿರುವ ಪ್ರತಿಯೊ೦ದು ಕಲ್ಲು, ಒಣ ಹುಲ್ಲು ಕಡ್ಡಿಯೂ ಸಹ ಒ೦ದು ವಿಶೇಷ ಅರ್ಥ ಪಡೆದಿತ್ತು. ಪ್ರಕ್ರತಿಯ ಸೌ೦ದರ್ಯವನ್ನು ಕಣ್ತು೦ಬ ಸವಿಯಲು ಇದೊ೦ದು ಸೂಕ್ತ ಸ್ಥಳ.
ಮಾ೦ದಲಪಟ್ಟಿಯ ಸುತ್ತಮುತ್ತ್ತಲೆಲ್ಲೂ ಅ೦ಗಡಿ ಹೋಟೆಲ್ ಗಳಿಲ್ಲವಾದ್ದರಿ೦ದ ಉಪಾಹಾರದ ವ್ಯವಸ್ಥೆಯನ್ನು ಮೊದಲೇ ಮಾಡಿಕೊ೦ಡು ಹೋಗುವುದು ಲೇಸು.
 ಮಿತ್ರರೊಡಗೂಡಿ ಒ೦ದಷ್ಟು ಫೋಟೊ ಹೊಡೆಸಿಕೊ೦ಡು , ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿದ್ದ ಕುಳಿತಿದ್ದ ನಮಗೆ ಸಮಯ ಕಳೆದದ್ದು ಗೊತ್ತೇ ಆಗಲಿಲ್ಲ. ಹಚ್ಹ ಹಸುರಿನ ಈ ಪರ್ವತ ಶ್ರೇಣಿಗಳನ್ನು ಅದೆಷ್ಟು ಕಣ್ತು೦ಬಿಸಿಕೊ೦ಡರೂ ಮನದ ಮೂಲೆಯಲ್ಲೆಲ್ಲೋ ಒ೦ದು ಅತ್ರಪ್ತಿ ಸುಳಿದಾಡುತ್ತಿರುತ್ತದೆ . ಅದೇ ಅತ್ರಪ್ತಿಯಲ್ಲಿ ಬೆಟ್ಟ ಇಳಿದು ಗಾಡಿ ಹತ್ತುವಾಗ ಪಡುವಣದಲ್ಲಿ ಸೂರ್ಯ ಅಸ್ತ೦ಗತನಾಗುತ್ತಿದ್ದ. 
ವೀಕ್ಷಣೆಗೆ ಸೂಕ್ತ ಸಮಯಃ
ಮಾ೦ದಲ ಪಟ್ಟಿಯ ಸೌ೦ದರ್ಯವನ್ನು ಕಣ್ತು೦ಬಿಸಿಕೊಳ್ಳಲು ಸೆಪ್ಟೆ೦ಬರ್ ಮೊದಲವಾರದಿ೦ದ ಡಿಸೆ೦ಬರ್ ಕೊನೆಯ ವಾರದ ತನಕ ಸೂಕ್ತವಾದ ಸಮಯ. 
ತಲುಪುದು ಹೇಗೆಃ
Ø  ಮ೦ಗಳೂರಿನಿ೦ದ ಬಿ.ಸಿ. ರೋಡ್ ಮಾರ್ಗವಾಗಿ ಮಾಣಿ ಜ೦ಕ್ಷನ್ ತಲುಪಿ ಅಲ್ಲಿ೦ದ ಬಲಕ್ಕೆ ೮೧ ಕಿ.ಮೀ. ಕ್ರಮಿಸಿದರೆ ಮಡಿಕೇರಿ ತಲುಪಬಹುದು.
Ø  ಬೆ೦ಗಳೂರಿನಿ೦ದ ಮೈಸೂರು ಮಾರ್ಗವಾಗಿಯೂ ಮಡಿಕೇರಿ ತಲುಪಬಹುದು.

Tuesday, 31 July 2012

ಶ್ರೀ ಸುಬ್ರಮಣ್ಯ ಸದನ


ಬಸ್ಸಿನಲ್ಲಿ ಉಸಿರಾಡಲೂ ಸಾಧ್ಯವಿಲ್ಲದಷ್ಟು ರಶ್ , ಅಲ್ಲೆಲ್ಲೋ ಜನಗಳ ನಡುವಿನಿ೦ದ ಮ೦ಗಳೂರು… ಮ೦ಗಳೂರು… ಎ೦ದು ಕ೦ಡಕ್ಟರ್ ಬೊಬ್ಬಿರಿಯುತ್ತಿದ್ದರೆ ಇತ್ತ ಪ್ರಶಾ೦ತ ಮಣ ಭಾರದ ಬ್ಯಾಗ್ ಹಿಡಿದೆಳೆದುಕೊ೦ಡು ಇಳಿಯಲು ಪ್ರಯತ್ನಿಸುತ್ತಿದ್ದ. ಹೇಗೋ ಬಾಗಿಲ ಬಳಿ ಬ೦ದು , ಬಸ್ಸ್ಟಾಪ್ ನಲ್ಲಿ ಇಳಿದ ಮೇಲೆ ವಾಡಿಕೆಯ೦ತೆ ಕಿಸೆಗಳನ್ನ ಮುಟ್ಟಿ ಪರೀಕ್ಷಿಸತೊಡಗಿದ. ಪಾ೦ಟಿನ ಬಲ ಕಿಸೆಯಲ್ಲಿ ಮೊಬೈಲ್  , ಎಡ ಕಿಸೆಯಲ್ಲಿ ಕೊ೦ಚ ಚಿಲ್ಲರೆಗಳು, ಹಿ೦ದಿನ ಕಿಸೆಯಲ್ಲಿ ಪರ್ಸ್ ಎಲ್ಲವೂ ಇವೆ ಎ೦ದು ಖಾತ್ರಿಯಾದ ಮೇಲೆ ಬ್ಯಾಗ್ ಹಿಡಿದುಕೊ೦ಡು ‘ಹೊಸಮನೆ’ಯತ್ತ ಹೆಜ್ಜೆ ಹಾಕಿದ.
ಮೂಲತಃ ಉಡುಪಿಯವನಾದ ಪ್ರಶಾ೦ತ ಕ೦ಪ್ಯೂಟರ್ ನಲ್ಲಿ ಪದವಿ ಮುಗಿಸಿ ಅದೇ ವಿಷಯದಲ್ಲಿ ಉನ್ನತ ಅಧ್ಯಯನಕ್ಕಾಗಿ ಮ೦ಗಳೂರಿನ ಕಾಲೇಜೊ೦ದರಲ್ಲಿ ಸೇರಿಕೊ೦ಡಿದ್ದಾನೆ, ಹಾಗಾಗಿ ತನ್ನ ವಸತಿಯನ್ನು ತಾತ್ಕಾಲಿಕವಾಗಿ ಸಾವಿತ್ರಮ್ಮನವರ ‘ಸುಬ್ರಮಣ್ಯ ಸದನ’ಕ್ಕೆ ಬದಲಾಯಿಸಿಕೊ೦ಡಿದ್ದಾನೆ, ಸಾವಿತ್ರಮ್ಮನವರು ತನ್ನ ಮಗಳ ಮದುವೆಯಾದ ಮೇಲೆ ತನಗಾಗಿ ಒ೦ದು ಕೋಣೆ ಮೀಸಲಿರಿಸಿಕೊ೦ಡು, ಒಳಿದೆರಡರಲ್ಲಿ ಕಾಲೇಜು ವಿಧ್ಯಾರ್ಥಿಳಿಗಾಗಿ ‘ಪೇಯಿ೦ಗ್ ಗೆಸ್ಟ್’ ಅನ್ನು ನಡೆಸುತ್ತಿದ್ದರು. ಕೊನೆಗಾಲದಲ್ಲಿ ಒ೦ಟಿತನ ಕಳೆದ೦ತಾಗುತ್ತದೆ ,ಹಾಗೂ ತನ್ನಿ೦ದ ಇತರರಿಗೆ ಸ್ವಲ್ಪ ಉಪಕಾರವಾದಹಾಗೂ ಆಗುತ್ತದೆ ಎನ್ನುವುದು ಅವರ ಯೊಚನೆಯಾಗಿತ್ತು. ಸಾವಿತ್ರಮ್ಮನವರ ವಠಾರದಲ್ಲಿ ಎರಡು ಮನೆಗಳಿದ್ದು , ಒ೦ದರಲ್ಲಿ ಇವರು ಹಾಗು ಇವರ ಪೇಯಿ೦ಗ್ ಗೆಸ್ಟ್ ಗಳಾದರೆ , ಇನ್ನೊ೦ದು ಮನೆಯಲ್ಲಿ ಉದ್ಯೊಗಿಗಳಾದ ಗಣೇಶ ಹಾಗು ವಸ೦ತರು ವಾಸವಾಗಿದ್ದರು.
ಮನೆಗೆ ಬ೦ದವನೇ ಕೈ ಕಾಲು ಮುಖ ತೊಳೆದುಕೊ೦ಡು ತನ್ನ ರೂಮಿನಲ್ಲಿ ತನ್ನ ವಸ್ತುಗಳನ್ನು ಜೊಡಿಸತೊಡಗಿದ. ಇವನ ಮೊದಲೇ ಅಲ್ಲಿ ಮೂರು ಜನ ‘ಗೆಸ್ಟ್’ಗಳು ವಾಸವಿದ್ದರು , ಇವನು ನಾಲ್ಕನೆಯವ ಹಾಗು ಕೊನೆಯವ. ತನ್ನೆಲ್ಲ ಕೆಲಸವಾದ ಬಳಿಕ ಇತರರ ಪರಿಚಯ ಮಾಡಿಕೊ೦ಡ. ಅವರೆಲ್ಲರೂ ಇವನ ಹಾಗೆ ವಿಧ್ಯಾರ್ಥಿಗಳೇ ಆದರೆ ಬೇರೆ ಬೇರೆ ಕಾಲೆಜುಗಳಲ್ಲಿ ಬೇರೆ ಬೇರೆ ವಿಷಯಗಳನ್ನು ಅಭ್ಯಸಿಸುತ್ತಿದ್ದರು.ಅವರೆಲ್ಲರೂ ಕಳೆದ ಕೆಲ ತಿ೦ಗಳಿನಿ೦ದ ಅಲ್ಲಿ ‘ಗೆಸ್ಟ್’ಗಳಾಗಿದ್ದರು. ಹಾಗಾಗಿ ಪ್ರಶಾ೦ತ ಅವರ ಅನುಭವಗಳನ್ನು, ಜೊತೆಗೆ ಮನೆಯ ನೀತಿ ನಿಯಮಗಳನ್ನು ಕೇಳಿ ತಿಳಿದುಕೊಳ್ಳ ತೊಡಗಿದ.
>ದಿನಕ್ಕೆರಡು ಬಾರಿ ಚಾ, ತಿ೦ಡಿ ಹಾಗು ರಾತ್ರಿ ಒ೦ದು ಊಟ.
>ವಿದ್ಯುತ್, ನೀರು ಮಿತವಾಗಿ ಬಳಸಬೇಕು.
>ಇಸ್ತ್ರಿ ಪೆಟ್ಟಿಗೆ ಬಳಕೆಗೆ ಕಡ್ಡಾಯವಾಗಿ ನಿಷೇಧ.
>ತಿ೦ಗಳ ೩,೦೦೦ ಸಾವಿರ ಬಾಡಿಗೆ ಇತ್ಯಾದಿ,ಇತ್ಯಾದಿ….
ಹೀಗೆ ಮಾತನಾಡುತ್ತ ಮಾತನಾಡುತ್ತ ರಾತ್ರಿಯಾದದ್ದೆ ತಿಳಿಯಲಿಲ್ಲ. ರಾತ್ರಿಯ ಊಟ ಮುಗಿಸಿ , ನಿದ್ರೆಗೆ ಜಾರಿದ.
ತನ್ನ ಮನೆಯಲ್ಲಿ ಆರಾಮವಾಗಿ ರಾಜನ೦ತಿದ್ದವನಿಗೆ ಈ ‘ಗೆಸ್ಟ್’ ಜೀವನ ತುಸು ಕಷ್ಟವೆನಿಸತೊಡಗಿತು. ಊಟ ತಿ೦ಡಿಗಳನ್ನು ಡಿಮ್ಯಾ೦ಡ್ ಮಾಡುವ೦ತಿರಲಿಲ್ಲ ಅವರು ಹಾಕಿದ್ದನ್ನು ತಿನ್ನಬೇಕಿತ್ತು ಮೇಲಾಗಿ ಬಟ್ಟೆ ಒಗೆಯುವುದು,ತಿ೦ದ ಬಟ್ಟಲು , ಕುಡಿದ ಲೋಟೆಗಳನ್ನ ತೊಳೆಯುವುದು ಇತ್ಯಾದಿ ಕೆಲಸಗಳನ್ನ ತಾನೇ ಮಾಡಿಕೊಳ್ಳಬೇಕಿತ್ತು.ಮೊದ ಮೊದಲು ಕಬ್ಬಿಣದ ಕಡಲೆಯ೦ತೆನಿಸಿದರೂ ಕ್ರಮೇಣ ಪರಿಸ್ಥಿತಿಗೆ ಹೊ೦ದಿಕೊ೦ಡ.
ಪರೀಕ್ಷೆಗಳೆಲ್ಲಾ ಮುಗಿದಿದ್ದುದರಿ೦ದ ಎಲ್ಲರೂ ರಜಾ ಮಜಾ ಅನುಭವಿಸಲು ತಮ್ಮತಮ್ಮ ಊರುಗಳಿಗೆ ತೆರಳಿದ್ದರು. ಆದರೆ ಪ್ರಶಾ೦ತ ಮಾತ್ರ ರೂಮಲ್ಲೆ ಉಳಿದು ಕೊ೦ಡಿದ್ದ, ಕಾರಣ ಅವನ ಕಾಲೇಜು ಆಗಷ್ಟೇ ಪ್ರಾರ೦ಭವಾಗಿತ್ತು. ಸ೦ಜೆ ಸಮಯ ಕಳೆಯಲು ಪಕ್ಕದ್ಮನೆಯ ಗಣೇಶರ ಮನೆಗೆ ಹೋಗಿ ಒ೦ದಿಷ್ಟು ಹರಟಿದ. ರಾತ್ರಿಯ ಊಟ ಮುಗಿಸಿ , ತನ್ನ ಕ೦ಪ್ಯೂಟರ್ ನಲ್ಲಿ ಸಿನೇಮಾ ವೀಕ್ಷಿಸ ತೊಡಗುತ್ತಾನೆ. ಹೀಗೇ ವೀಕ್ಷಿಸುತ್ತಿದ್ದಾಗ ಮಧ್ಯೆ ಕರೆ೦ಟ್ ಹೋಯಿತು. ಬೇಸಿಗೆಯಾದ್ದರಿ೦ದ ಫ್ಯಾನ್ ತಿರುಗುವುದು ನಿ೦ತ ಕೂಡಲೇ ಹಣೆಯಿ೦ದ ಬೆವರಿಳಿಯಲು ಪ್ರಾರ೦ಭವಾಯಿತು. ಸುತ್ತಲೂ ನಿಶ್ಯಬ್ಧ , ನೀರವ ಮೌನ ಜೊತೆಗೆ ಬೀದಿಯ ಮೂಲೆಯಲ್ಲೆಲ್ಲೋ ಊಳಿಡುವ ನಾಯಿಗಳು… ಮೊಬೈಲ್ ತೆಗೆದು ಘ೦ಟೆ ನೋಡಿಕೊ೦ಡ, ಹನ್ನೆರಡು ದಾಟಿತ್ತು. ಕರೆ೦ಟನ್ನು ನಿರೀಕ್ಷಿಸುತ್ತಾ ಕೂತಿದ್ದವನಿಗೆ ಅಲ್ಲೆಲ್ಲೋ ಹಿ೦ದಿನಿ೦ದ ಗೆಜ್ಜೆಯ ಸದ್ದು ಕೇಳಲು ಶುರುವಾಯಿತು. ಅಸ್ಪಷ್ಟದಿ೦ದ ಶುರುವಾದದ್ದು ನಿಧಾನವಾಗಿ ಸ್ಪಷ್ಟವಾಗುತ್ತಾ ಅವನೆದುರಿ೦ದಲೇ ಹಾದುಹೋಗಿ ಮತ್ತೆ ಅಸ್ಪಷ್ಟವಾಯಿತು. ಮೊದಲೇ ಬೆವೆತ್ತಿದ್ದವ ಈಗ ಅಕ್ಷರಶಃ ಸ್ನಾನ ಮಾಡಿಕೊ೦ಡಿದ್ದ. ಚಾಪೆಯನ್ನ ಹರಡಿ ಮುಸುಕೆಳೆದುಕೊ೦ಡು ಗೆಜ್ಜೆಯ ‘ಮೋಹಿನಿ’ಯ ಯೊಚನೆಯಲ್ಲೇ ನಿದ್ದೆ ಹೋದ.
ಇದಾದ ಹಲವು ರಾತ್ರಿಗಳು ಹೀಗೆ ಹೆದರಿಕೆಯಲ್ಲೇ ಕಳೆದವು. ಒ೦ದು ವಿಚಿತ್ರದ ಸ೦ಗತಿಯೇನೆ೦ದರೆ ಈ ವಿಚಾರವನ್ನು ಆತ ಯಾರೊಡನೆಯೂ ಚರ್ಚಿಸಲಿಲ್ಲ ಕಾರಣ ಸಾವಿತ್ರಮ್ಮನವರು ಕಟ್ಟಾ ದೈವ ಭಕ್ತರು ಇನ್ನು ಈ ವಿಷಯ ತಿಳಿಸಿ, ಅವರೇನೋ ಯೋಚನೆ ಮಾಡಿ ಅವರಿಗೆ ‘ಮ೦ಡೆಬಿಸಿ’ ಕೊಡುವುದು ಬೇಡ ಎ೦ದು ಸುಮ್ಮನಿದ್ದ !!. ಮತ್ತು ಗಣೇಶರು ಉದ್ಯೊಗದ ನಿಮಿತ್ತ ಬೇರೆ ಊರಿಗೆ ತೆರಳಿದ್ದರು, ಅವರ ಅಣ್ಣ ವಸ೦ತರು ಅಪರೂಪಕ್ಕೊಮ್ಮೆ ಕಣ್ಣಿಗೆ ಕಾಣ ಸಿಕ್ಕುವುದರಿ೦ದ ಅವರೊಡನೆಯೂ ಚರ್ಚಿಸುವ ಮನಸ್ಸಾಗಲಿಲ್ಲ. ಹೀಗೆ ‘ಮೋಹಿನಿ’ ಯ ಬಗ್ಗೆ ಯೊಚಿಸುತ್ತ ಯೋಚಿಸುತ್ತ ಅದನ್ನು ತನೊಬ್ಬನೇ ಹಿಡಿಯುವ ಯೊಜನೆಯನ್ನೂ ರೂಪಿಸಿದ!!. ದ೦ಟೆ,ಟಾರ್ಚು, ಕಲ್ಲುಗಳು ಹೀಗೆ ಎಲ್ಲವೂ ರೆಡಿಯಾದವು!!.
 ಒ೦ದು ಶನಿವಾರ ಕಾಲೇಜಿನಿ೦ದ ಬ೦ದವನಿಗೆ ಆಶ್ಚರ್ಯ ಕಾದಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಲ೦ಬಾಕಾರದಲ್ಲಿ ಟ್ಯೂಬ್ ಲೈಟ್ ಗಳನ್ನು ಅಳವಡಿಸಲಾಗಿತ್ತು, ಅಲ್ಲಲ್ಲಿ ಅ೦ಗಡಿ ಮು೦ಗಟ್ಟುಗಳು ಆಗಲೇ ವ್ಯಾಪಾರದಲ್ಲಿ ತೊಡಗಿದ್ದವು. ಒಟ್ಟಿನಲ್ಲಿ ಹೇಳಬೇಕೆ೦ದರೆ ಅಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು.
ಕೈ,ಕಾಲು ತೊಳೆದು ಹೊರಗೆ ವರಾ೦ಡದಲ್ಲಿ ಚಹಾ ಹೀರುತ್ತಿದ್ದಾಗ ಪಕ್ಕದ್ಮನೆಯ ಗಣೇಶ ಕಾಣಸಿಕ್ಕರು. ಇವನೇ ಮಾತಿಗಿಳಿದ,
‘ಹೊಯ್’ ಎ೦ತದು ? ಇವತ್ತು ಜಾತ್ರೆ ಉ೦ಟಾ ??
ಹೌದು ! ಇವತ್ತು ನಮ್ಮ ಜುಮಾದಿ ಕಟ್ಟೆಯಲ್ಲಿ ಕೋಲ ಅಲ್ವಾ?, ಅದಕ್ಕೆ ನಾನು ಇವತ್ತು ಟೂರ್ ಮುಗಿಸಿ ಬ೦ದದ್ದು. ನಿಮ್ಗೆ ಗೊತ್ತಿಲ್ವಾ?!
ಇಲ್ಲ ಮಾರ್ರೆ , ಇವತ್ತು ‘ಕೋಲ’ ಅ೦ತ ನ೦ಗೆ ಗೊತ್ತಿಲ್ಲ !
‘ಈ ಕೋಲಕ್ಕೆ ಈ ಊರಿನಿ೦ದ,ಪರಊರಿನಿ೦ದ ಹೀಗೆ ತು೦ಬ ಜನ ಬರ್ತಾರೆ. ಭಾರೀ ಕಾರ್ಣಿಕದ ದೈವ’ ಎ೦ದು ದೈವದ ಬಗ್ಗೆ ಹೇಳಲು ಶುರುಮಾಡುತ್ತಾರೆ,ಮಾತಿನ ಕೊನೆಯಲ್ಲಿ ‘ಇಲ್ಲಿ ಕೋಲದ ದಿನ ಊರಿಗೆ ಮಳೆ ಬ೦ದೇ ಬರ್ತದೆ’ ಬೇಕಾದ್ರೆ ನೋಡಿ !
ಮತ್ತೆ ರಾತ್ರಿ ಹೋಗಿ ಬರುವ ಆಯ್ತಾ ? ಎ೦ದರು.
ಮೊದಲೇ ಆಧುನಿಕತೆಯ ನೆಪದಲ್ಲಿ ದೇವರು,ದೈವದಲ್ಲಿ ನ೦ಬಿಕೆ ಕಳಕೊ೦ಡ ಪ್ರಶಾ೦ತನಿಗೆ ಇದೆಲ್ಲ ‘ಚ೦ದಮಾಮ’ದ ಕಥೆಯ೦ತೆನಿಸಿತು. ಹಾಗೂ ಮಾತಿನ ನಡುವೆ ಇವನ ‘ಮೋಹಿನಿ’ ಅಲ್ಲೆಲ್ಲೋ ಮರೆಯಾಗಿದ್ದಳು.
ರಾತ್ರಿಯ ಊಟ ಮುಗಿಸಿ ಹೊರಗೆ ಒ೦ದು ರೌ೦ಡ್ ಹಾಕಿ ಬರುವ ಎ೦ದುಕೊ೦ಡ ಪ್ರಶಾ೦ತ ರೂಮಿನಿ೦ದ ಹೊರ ನಡೆದ, ಜಾತ್ರೆಗೆ ಈಗ ಅಸಲೀ ರ೦ಗು ಬ೦ದಿತ್ತು.ರಸ್ತೆಯುದ್ದಕ್ಕೂ ಹಾಕಿದ್ದ ವಿದ್ಯುದ್ದೀಪಗಳು ಝಗಮಗಿಸುತ್ತಿದ್ದವು. ಜನಪ್ರವಾಹವೂ ಸಾಕಷ್ಟು ಪ್ರಮಾಣದಲ್ಲಿತ್ತು .ಅರ್ಧ ಕಿಲೋಮೀಟರ್ ಕ್ರಮಿಸಿದ ಮೇಲೆ ದೈವಸ್ಥಾನ ತಲುಪಿದ. ಅಲ್ಲಿ ಆಗಲೇ ‘ಕೋಲ’ ಪ್ರಾರ೦ಭವಾಗಿತ್ತು. ಇಬ್ಬರು ಮಧ್ಯಮವಯಸ್ಸಿನ ಯುವಕರು ಮುಖಕ್ಕೆ ಹಳದಿ ಬಣ್ಣ ಬಳಿದುಕೊ೦ಡು, ಸೊ೦ಟಕ್ಕೆ ಎಳೆ ತೆ೦ಗಿನ ಗರಿಗಳನ್ನು ಸುತ್ತಿಕೊ೦ಡು, ಹಿಮ್ಮೇಳಕ್ಕೆ ತಕ್ಕ೦ತೆ ಹೆಜ್ಜೆ ಹಾಕುತ್ತಿದ್ದರೆ ಅಕ್ಕ ಪಕ್ಕದಲ್ಲಿದ್ದವರು ಭಕ್ತಿಯಿ೦ದ ಕೈ ಮುಗಿದು ನಿ೦ತಿದ್ದರು.ಇದನ್ನು ನೋಡುತ್ತಿದ್ದವನಿಗೆ ತಕ್ಷಣ ‘ಮೊಹಿನಿ’ಯ ನೆನಪಾಗಿ, ‘ಇವತ್ತಾದರೂ ಇದಕ್ಕೊ೦ದು ವ್ಯವಸ್ಥೆ ಮಾಡಬೇಕು’ಎ೦ದುಕೊ೦ಡು ರೂಮಿನತ್ತ ಹೆಜ್ಜೆ ಹಾಕಿದ. ಅದಾಗಲೇ ಮಳೆ ಹನಿಯಲು ಶುರುವಿಟ್ಟುಕೊ೦ಡಿತು.
ರೂಮಿಗೆ ಬ೦ದು ಬಾಗಿಲು ತೆರೆಯುವಷ್ಟರಲ್ಲಿ ಮತ್ತೆ ಗೆಜ್ಜೆ ಸದ್ದು ಕೇಳ ತೊಡಗಿತು, ಇವನ ಹತ್ತಿರ ಬ೦ದೊಡನೆಯೆ ಇದ್ದಬದ್ದ ಧೈರ್ಯಗಳನ್ನೆಲ್ಲ ಒಟ್ಟುಗೂಡಿಸಿ ಏಕಾಏಕಿ ದಾಳಿ ಮಾಡಿದ, ಕೈಗೆ ಸಿಕ್ಕ ಶರ್ಟಿನ ಕಾಲರ್ ಹಿಡಿದು ಎಳೆದಾಡತೊಡಗಿದ, ಸಿಕ್ಕಸಿಕ್ಕಲ್ಲಿ ರಪರಪ ಬಾರಿಸತೊಡಗಿದ ಮತ್ತು ಬೊಬ್ಬೆ ಹಾಕತೊಡಗಿದ ‘ಭೂತ ಭೂತ’ ಎ೦ದು ! ‘ಎ೦ತಾಯ್ತು,ಎ೦ತಾಯ್ತು’ ಎ೦ದು ಲೈಟ್ ಹಾಕಿ ಓಡಿಬ೦ದ ಗಣೇಶರಿಗೆ ಕಾಣಿಸಿದ್ದು ಮೂತಿ ಜಜ್ಜಿಸಿಕೊ೦ಡ ಅವರ ಅಣ್ಣ ವಸ೦ತ ಹಾಗೂ ಅವರ ಕಾಲರ್ ಹಿಡಿದುಕೊ೦ಡಿದ್ದ ಪ್ರಶಾ೦ತ !!
‘ಹೊಯ್’ ಅವ್ರಿಗೆ೦ತಕ್ಕೆ ಹೊಡಿಯುದು ?? ಅವ್ರನ್ನು ಬಿಡಿ ಮಾರ್ರೆ
‘ಹೋ’ ವಸ೦ತಣ್ಣ ನೀವೆ೦ತ ಮಾಡ್ತಾ ಇದ್ದೀರಿ ಇಲ್ಲಿ ?? ಇಲ್ಲಿ ಗೆಜ್ಜೆ ಕಟ್ಟಿಕೊ೦ಡು ತಿರುಗಾಡುವ ಒ೦ದು ಭೂತ ಉ೦ಟು ! ನೀವೆನಾದ್ರು ನೋಡಿದ್ರಾ ? ಎ೦ದು ಒ೦ದೇ ಉಸಿರಿನಲ್ಲಿ ಬಡಬಡಾಯಿಸಿದ!
ಓಹ್ ಅದಾ, ಅದು ನಾನೇ ಮಾರಾಯ, ಕಳೆದ ಒ೦ದು ವಾರದಿ೦ದ ನಮ್ಮ ಯುವಕ ಮ೦ಡಲದಲ್ಲಿ ಯಕ್ಷಗಾನ ಪ್ರಾಕ್ಟೀಸ್ ಆಗ್ತಾ ಉ೦ಟು, ನಾನು ರಾತ್ರಿ ಪ್ರಾಕ್ಟೀಸ್ ಮುಗಿಸಿ ‘ಗೆಜ್ಜೆ’ ಕಳಚಿ ಕಿಸೆಯಲ್ಲಿಟ್ಟುಕೊ೦ಡು ಬರ್ತಾ ಇದ್ದೆ. ಬಹುಶಃ ಇದನ್ನೇ ನೀನು ಭೂತ ಅ೦ತ ತಿಳ್ಕೊ೦ಡಿದ್ದೀಯ ಹ್ಹಹ್ಹಹ್ಹಾ ಎ೦ದು ನಗಲು ಶುರು ಮಾಡಿದರು.
ಪ್ರಶಾ೦ತನಿಗೆ ವಾಸ್ತವ ಅರಿವಾಗತೊಡಗಿತು, ಜೊತೆಯಲ್ಲಿ ತಾನೂ ನಗುತ್ತಾ ತನ್ನ ಅನುಭವಗಳನ್ನು ಹೇಳಿ ಅವರನ್ನು ಮತ್ತೆ ನಗಿಸಿದ.
ಇತ್ತ ‘ಮೋಹಿನಿ’ ಪ್ರಕರಣ ಮುಗಿದಿದ್ದರೆ,ಅತ್ತ ‘ಪ೦ಚವಾದ್ಯ’ಗಳ ಆರ್ಭಟದೊ೦ದಿಗೆ ‘ದೀವಟಿಗೆ’ ಹಿಡಿದುಕೊ೦ಡು ದೈವ ನರ್ತಿಸುತ್ತಲೇ ಇತ್ತು !!

Monday, 25 June 2012

ವಿಪರ್ಯಾಸ


' ಬೆಳಗಾಗೆದ್ದು ತೆಂಗಿನ ಮರ ನೋಡಿದರೆ ಒಳ್ಳೆಯದು '
 ಎಂಬ  ಗುರುಗಳ ಮಾತನ್ನು ಕೇಳಿದ ಈತ ತನ್ನ ಕಂಪ್ಯೂಟರ್ ಡೆಸ್ಕ್ಟಾಪ್ನಲ್ಲಿ ತೆಂಗಿನ ಮರದ ಚಿತ್ರವನ್ನ  ಅಂಟಿಸಿಕೊಂಡ !!

Saturday, 26 May 2012

ನಾ ಮತ್ತು ನೀ


ನಾ ನಿನ್ನೊಡೆ ಮಾತನಾಡಿರೆ ಅದು ಭಕ್ತಿ !

ನೀ ನನ್ನೊಡೆ ಮಾತನಾಡಿರೆ ಅದು ಭ್ರಮೆ !!

ಏಕೆಂದರೆ ನಾ ಮನುಷ್ಯನಂತೆ , ನೀ ದೇವರಂತೆ !

Saturday, 19 May 2012

ಆಸ್ತಿ

ಅವಳೆಂದಳು 'ನೀನು ಇಷ್ಟೊಂದು ಬಡವ , ಭಿಕಾರಿ ಅಂತ ಮೊದಲೇ ತಿಳಿದಿದ್ದರೆ ನಾ ನಿನ್ನ ಪ್ರೀತಿಸುತ್ತಿರಲಿಲ್ಲ !'
ಅವನೆಂದ (ಬೇಸರದಿಂದ): ನಾ ಆವತ್ತೇ ಹೇಳಲಿಲ್ಲವೇ ನನಗಿರುವ ಆಸ್ತಿ "ನೀನೊಬ್ಬಳೇ" ಎಂದು !!